Tuesday, October 14, 2008

ಧರ್ಮಭಾರತೀ ಆಗಸ್ಟ್ ಪತ್ರಿಕೆ




ಒಲವಿನ ಓದುಗ......

ಒಲವಿಂದ ಒಳಗೆ ಬಾ.....
ವಿಚಾರ ಶೀಲ !
ಪ್ರಕೃತ ಸಂಚಿಕೆಯಲ್ಲಿ ಕೀರ್ತಿಶೇಷ ಶ್ರೀ ಡಿ.ವಿ.ಜಿಯವರ “ಬಾಳಿಗೊಂದು ನಂಬಿಕೆ” ಧಾರಾವಾಹಿಯಾಗಿ ಆರಂಭಗೊಂಡಿದೆ. ಇದೊಂದು ಹೊಸ ಉಪಕ್ರಮ. ಒಂದೊಂದು ತಲೆಮಾರು ಕಳೆಯತೊಡಗಿದಂತೆ ಓದುವ ಆಯ್ಕೆ ಮತ್ತು ಆದ್ಯತೆ ಬದಲಾಗುತ್ತಾ ಹೋಗುತ್ತದೆ. ಹಾಗೆಯೇ ಲೇಖಕರ ಆಯ್ಕೆಯೂ ಬದಲಾಗುತ್ತದೆ. ಇದರಿಂದಾಗಿ ಭಾವನೆಗಳು ಮತ್ತು ಯೋಚನೆಗಳು ಬೇರೆಯಾಗುತ್ತವೆ. ಇದರ ಪರಿಣಾಮವೇ ‘ಆಧುನಿಕ’ ಎನ್ನುವ ಹೊಸ ಬದುಕಿನ ಪರಿ. ‘ಆಧುನಿಕ’ ತಪ್ಪಲ್ಲ; ಪುರಾತನದ ಬೇರನ್ನು ಮರೆತಿರುವುದು ತಪ್ಪು. ಪ್ರತಿ ವಸಂತಕ್ಕೊಮ್ಮೆ ಮರ ಹೊಸತಾದರೂ ಬೇರು ಹಳೆಯದೇ. ಹಾಗಾಗಿಯೇ ಶ್ರೀ ಡಿ.ವಿ.ಜಿ “ಹಳೆ ಬೇರು ಹೊಸ ಚಿಗುರು ಕೂಡಿರಲು ಮರ ಸೊಗಸು” ಎನ್ನುತ್ತಾರೆ.



ಹಳೆಬೇರನ್ನು ಮತ್ತೆ ಮತ್ತೆ ನೆನಪಿಸುತ್ತಲೇ ಇರುವುದೇ “ಧರ್ಮಭಾರತಿ”ಯ ಕಾರ್ಯ. ಹಾಗಾಗಿ ಹಳೆ ಲೇಖಕರ ಹಳೆ ಬೇರಿನ ಕುರಿತಾದ ಹಳೆ ಗ್ರಂಥಗಳನ್ನು ಹೊಸದಾಗಿ ಸಮಗ್ರವಾಗಿ ಮುದ್ರಿಸುತ್ತಿದ್ದೇವೆ.


**********
ಹಿಂದಿನ ಸಂಚಿಕೆಯಲ್ಲಿ ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳಲೋಸುಗ “ನನ್ನದೊಂದು ಪ್ರಶ್ನೆ” ಅಂಕಣ ಪ್ರಾರಂಭವಾಗಿತ್ತು. ಈ ಸಂಚಿಕೆಯಲ್ಲಿ “ಇದರ ಅರ್ಥ ಹೇಳಿ” ಅನ್ನುವ ಅಂಕಣ ಆರಂಭಗೊಳ್ಳುತ್ತಿದೆ. ಭಾರತೀಯ ಸಂಸ್ಕೃತಿ ಸಂಸ್ಕೃತವನ್ನು ಆಧರಿಸಿ ನಿಂತಿದೆ. ಸಂಸ್ಕೃತಿ ಸಮಗ್ರವಾಗಿ ಅರ್ಥವಾಗಲು ಮೂಲದ ಅರಿವು ಅತ್ಯಾವಶ್ಯಕ. ಮೂಲ ವಿಷಯವಿರುವ ಭಾಷೆಯಿಂದ ನಾವಿಂದು
ದೂರ ಸರಿದಿದ್ದೇವೆ. ನಮ್ಮೆಲ್ಲರ ಪರಿಸರದಲ್ಲಿ ಸಂಸ್ಕೃತವನ್ನು ಅರಿತವರು ಇರಲಾರರು. ನಮಗರ್ಥವಾಗದ ಯಾವುದೋ ಸಂಸ್ಕೃತ ಶ್ಲೋಕ ನಮಗೆ ಗೊತ್ತಿರಬಹುದು. ಈ ಸಮಸ್ಯೆಯ ಪರಿಹಾರಕ್ಕಾಗಿ ಈ ಅಂಕಣ. ಶ್ಲೋಕ ನೀವು ಕಳುಹಿಸಿ; ಅರ್ಥ ನಾವು ಹೇಳ್ತೇವೆ.
***********
‘ಸನಾತನಭಾರತ’ ಅಂಕಣ ಮುಂದುವರಿಯುತ್ತಿದೆ. ಹಿಂದಿನ ವಿಶೇಷ ಸಂಚಿಕೆಗೆ ಸಂಗ್ರಹಿಸಿದ ವಿಷಯಗಳಿವು. ಆ ಸಂಚಿಕೆಯನ್ನು ರೂಪಿಸಿಯೂ ಉಳಿದ ಲೇಖನಗಳ ಸಂಖ್ಯೆ ದೊಡ್ಡದು. ಸನಾತನಭಾರತ ಎಲ್ಲಕ್ಕಿಂತ ದೊಡ್ಡದು.

ಧರ್ಮಭಾರತೀ ಆಗಸ್ಟ್ ಪತ್ರಿಕೆಯನ್ನು ಅಂತರಜಾಲದಲ್ಲಿ ಓದಬಹುದು. ವಿಳಾಸ: http://www.dharmabharathi.org/epaper.html


ಮತ್ತೆಲ್ಲ ಎಂದಿನಂತೆ.......


ಒಲವಿನ ಒಸಗೆಯಲ್ಲಿ

-ವಿದ್ವಾನ್ ಜಗದೀಶ ಶರ್ಮಾ
ಸಂಪಾದಕ

No comments: