Tuesday, October 14, 2008

ಗುರುಭಾರತೀ - ಕರ್ಮದ ಬಳ್ಳಿ ತುಂಡಾದಾಗ......

ಜಗದ್ಗುರುಶಂಕರಾಚಾರ್ಯಮಹಾಸಂಸ್ಥಾನಮ್
ಶ್ರೀಸಂಸ್ಥಾನಗೋಕರ್ಣ-ಶ್ರೀರಾಮಚಂದ್ರಾಪುರಮಠ
ಶ್ರೀಮತ್ಪರಮಹಂಸೇತ್ಯಾದಿಬಿರುದಾಲಂಕೃತ
ಶ್ರೀಗೋಕರ್ಣಮಂಡಲಾಧೀಶ್ವರ
ಶ್ರೀಮದ್ರಾಘವೇಂದ್ರಭಾರತೀಗುರುಕರಕಮಲಸಂಜಾತ
ಶ್ರೀಮಜ್ಜಗದ್ಗುರುಶಂಕರಾಚಾರ್ಯ

ಶ್ರೀಮದ್ರಾಘವೇಶ್ವರಭಾರತೀಮಹಾಸ್ವಾಮಿಗಳವರ ಸಂದೇಶ
ಗುರುಭಾರತೀ

ಕರ್ಮದ ಬಳ್ಳಿ ತುಂಡಾದಾಗ......

ಶ್ರೀದತ್ತಾತ್ರೇಯರ ಅವತಾರವೆಂದೇ ಪ್ರಸಿದ್ಧರಾದ ಶ್ರೀನೃಸಿಂಹಸರಸ್ವತೀಮಹಾಸ್ವಾಮಿಗಳು ಪಂಚಗಂಗಾ ಸಂಗಮದ ನರಸೋಬವಾಡಿಯಲ್ಲಿ ನೆಲೆಸಿದ್ದ ಕಾಲವದು. ಗ್ರಾಮದಲ್ಲಿ ಅತ್ಯಂತ ದರಿದ್ರನಾದ ಆದರೆ ಸುಶೀಲನಾದ ಬ್ರಾಹ್ಮಣನೊಬ್ಬನಿದ್ದನು. ಜೀವನೋಪಾಯಕ್ಕಾಗಿ ಅಲ್ಲಿ ಇಲ್ಲಿ ಭಿಕ್ಷೆ ಬೇಡುತ್ತಿದ್ದ ಆತನ ಮನೆಯ ಮುಂದೆ ಅವರೆಯ ಬಳ್ಳಿಯೊಂದು ಸಮೃದ್ಧವಾಗಿ ಬೆಳೆದಿತ್ತು. ಅದರಲ್ಲಿ ಅತಿಶಯವಾಗಿ ಆಗುತ್ತಿದ್ದ ಅವರೆಕಾಯಿಗಳಿಂದ ಅವನ ಉದರಭರಣವಾಗುತ್ತಿತ್ತು. ಶ್ರೀಗುರುಗಳ ಪರಮ ಭಕ್ತನಾಗಿದ್ದ ಆತ ಒಮ್ಮೆ ಗುರುಗಳನ್ನು ಮನೆಗೆ ಕರೆದುಕೊಂಡು ಹೋಗಿ ಅತ್ಯಂತ ಶ್ರದ್ಧೆಯಿಂದ ಪೂಜಿಸಿದ. ಗುರುಗಳು ಬ್ರಾಹ್ಮಣನನ್ನು ಹತ್ತಿರ ಕರೆದು “ಇಂದಿಗೆ ನಿನ್ನ ದಾರಿದ್ರ್ಯವು ತೊಲಗಿತು, ಅಖಂಡೈಶ್ವರ್ಯವು ನಿನ್ನಲ್ಲಿ ಇನ್ನು ಮೇಲೆ ಸ್ಥಿರವಾಗಿರುವುದು” ಎಂದು ವರವನ್ನಿತ್ತು ಹೊರಟರು. ಹೊರಗೆ ಹೋಗುವಾಗ ಅಂಗಳದಲ್ಲಿ ಬೆಳೆದಿದ್ದ ಅವರೆಯ ಬಳ್ಳಿಯನ್ನು ಬೇರಿನವರೆಗೆ ಕತ್ತರಿಸಿ ಹಾಕಿ ಹೊರಟು ಹೋದರು. ಬ್ರಾಹ್ಮಣ ಕುಟುಂಬಕ್ಕೆ ಆಘಾತವಾಯಿತು. ಜೀವನಕ್ಕೆ ಏಕೈಕ ಆಧಾರವಾಗಿದ್ದ ಅವರೆಯ ಬಳ್ಳಿಯ ನಾಶಕ್ಕಾಗಿ ಬ್ರಾಹ್ಮಣ ಪತ್ನಿಯು ಶೋಕಿಸತೊಡಗಿದಳು. ಕತ್ತರಿಸಿ ಚೆಲ್ಲಿದ ಅವರೆಬಳ್ಳಿಯನ್ನು ತೆಗೆದು ನದಿಗೆಸೆದ ಬ್ರಾಹ್ಮಣ “ಬಳ್ಳಿಯೇ ಹೋದಮೇಲೆ ಅದರ ಬೇರು ನಮ್ಮ ಮನೆಯ ಮುಂದೆ ಏಕಿರಬೇಕು?” ಎಂಬ ಭಾವನೆಯಿಂದ ಅದರ ಬೇರು ಅಗೆದು ತೆಗೆಯತೊಡಗಿದನು. ಆಗ ಬೇರುಗಳ ಅಡಿಯಲ್ಲಿ ಹೊನ್ನಿನ ಕುಂಭವೊಂದು ಕಾಣಸಿಕ್ಕಿತು. ಬ್ರಾಹ್ಮಣನ ಸಮಸ್ತ ದಾರಿದ್ರ್ಯವೂ ಪರಿಹಾರವಾಗಿ ಅμಶ್ವರ್ಯಪ್ರಾಪ್ತಿಯಾಗಿತ್ತು.

ಈ ಕಥೆಯಲ್ಲಿ ಬರುವ ಬ್ರಾಹ್ಮಣ ಮನೆಯಂಗಳದಲ್ಲಿ ಅವರೆ ಬಳ್ಳಿಯನ್ನು ನೆಟ್ಟುಕೊಂಡು ನಿತ್ಯವೂ ಅದರ ಫಲವನ್ನು ತಿನ್ನುವಂತೆ ನಮ್ಮ ಮನೆಯಂಗಳದಲ್ಲಿ ಬಹುಕಾಲದಿಂದ ರೂಢಮೂಲವಾದ ಪೂರ್ವಕರ್ಮದ ಬಳ್ಳಿಯಲ್ಲಿ ಬಿಡುವ ದುಃಖ-ದಾರಿದ್ರ್ಯಗಳ ಫಲವನ್ನು ಅನುದಿನವೂ ತಿನ್ನುತ್ತಿದ್ದೇವೆ. ಪರಮಕೃಪಾಕರನಾದ ಗುರು ಕೃಪೆದೋರಿ ಆ ಕರ್ಮದ ಬಳ್ಳಿಯನ್ನು ಕತ್ತರಿಸಿದಾಗ ಪ್ರಕೃತಿಗರ್ಭದಲ್ಲಿ ಮುಚ್ಚಿಹೋಗಿರುವ ಆತ್ಮಾನಂದದ ನಿಧಿ ನಮಗೆ ದೊರೆಯುತ್ತದೆ. ಒಮ್ಮೆ ಆ ನಿಧಿ ದೊರೆತವನು ಮತ್ತೆ ಎಂದೆಂದಿಗೂ ಬಡವನಾಗಲಾರ.
ಕೃಪೆಃ ಧರ್ಮಭಾರತೀ ಮಾಸಪತ್ರಿಕೆ - ಆಗಸ್ಟ್

ಧರ್ಮಭಾರತೀ ಆಗಸ್ಟ್ ಪತ್ರಿಕೆ




ಒಲವಿನ ಓದುಗ......

ಒಲವಿಂದ ಒಳಗೆ ಬಾ.....
ವಿಚಾರ ಶೀಲ !
ಪ್ರಕೃತ ಸಂಚಿಕೆಯಲ್ಲಿ ಕೀರ್ತಿಶೇಷ ಶ್ರೀ ಡಿ.ವಿ.ಜಿಯವರ “ಬಾಳಿಗೊಂದು ನಂಬಿಕೆ” ಧಾರಾವಾಹಿಯಾಗಿ ಆರಂಭಗೊಂಡಿದೆ. ಇದೊಂದು ಹೊಸ ಉಪಕ್ರಮ. ಒಂದೊಂದು ತಲೆಮಾರು ಕಳೆಯತೊಡಗಿದಂತೆ ಓದುವ ಆಯ್ಕೆ ಮತ್ತು ಆದ್ಯತೆ ಬದಲಾಗುತ್ತಾ ಹೋಗುತ್ತದೆ. ಹಾಗೆಯೇ ಲೇಖಕರ ಆಯ್ಕೆಯೂ ಬದಲಾಗುತ್ತದೆ. ಇದರಿಂದಾಗಿ ಭಾವನೆಗಳು ಮತ್ತು ಯೋಚನೆಗಳು ಬೇರೆಯಾಗುತ್ತವೆ. ಇದರ ಪರಿಣಾಮವೇ ‘ಆಧುನಿಕ’ ಎನ್ನುವ ಹೊಸ ಬದುಕಿನ ಪರಿ. ‘ಆಧುನಿಕ’ ತಪ್ಪಲ್ಲ; ಪುರಾತನದ ಬೇರನ್ನು ಮರೆತಿರುವುದು ತಪ್ಪು. ಪ್ರತಿ ವಸಂತಕ್ಕೊಮ್ಮೆ ಮರ ಹೊಸತಾದರೂ ಬೇರು ಹಳೆಯದೇ. ಹಾಗಾಗಿಯೇ ಶ್ರೀ ಡಿ.ವಿ.ಜಿ “ಹಳೆ ಬೇರು ಹೊಸ ಚಿಗುರು ಕೂಡಿರಲು ಮರ ಸೊಗಸು” ಎನ್ನುತ್ತಾರೆ.



ಹಳೆಬೇರನ್ನು ಮತ್ತೆ ಮತ್ತೆ ನೆನಪಿಸುತ್ತಲೇ ಇರುವುದೇ “ಧರ್ಮಭಾರತಿ”ಯ ಕಾರ್ಯ. ಹಾಗಾಗಿ ಹಳೆ ಲೇಖಕರ ಹಳೆ ಬೇರಿನ ಕುರಿತಾದ ಹಳೆ ಗ್ರಂಥಗಳನ್ನು ಹೊಸದಾಗಿ ಸಮಗ್ರವಾಗಿ ಮುದ್ರಿಸುತ್ತಿದ್ದೇವೆ.


**********
ಹಿಂದಿನ ಸಂಚಿಕೆಯಲ್ಲಿ ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳಲೋಸುಗ “ನನ್ನದೊಂದು ಪ್ರಶ್ನೆ” ಅಂಕಣ ಪ್ರಾರಂಭವಾಗಿತ್ತು. ಈ ಸಂಚಿಕೆಯಲ್ಲಿ “ಇದರ ಅರ್ಥ ಹೇಳಿ” ಅನ್ನುವ ಅಂಕಣ ಆರಂಭಗೊಳ್ಳುತ್ತಿದೆ. ಭಾರತೀಯ ಸಂಸ್ಕೃತಿ ಸಂಸ್ಕೃತವನ್ನು ಆಧರಿಸಿ ನಿಂತಿದೆ. ಸಂಸ್ಕೃತಿ ಸಮಗ್ರವಾಗಿ ಅರ್ಥವಾಗಲು ಮೂಲದ ಅರಿವು ಅತ್ಯಾವಶ್ಯಕ. ಮೂಲ ವಿಷಯವಿರುವ ಭಾಷೆಯಿಂದ ನಾವಿಂದು
ದೂರ ಸರಿದಿದ್ದೇವೆ. ನಮ್ಮೆಲ್ಲರ ಪರಿಸರದಲ್ಲಿ ಸಂಸ್ಕೃತವನ್ನು ಅರಿತವರು ಇರಲಾರರು. ನಮಗರ್ಥವಾಗದ ಯಾವುದೋ ಸಂಸ್ಕೃತ ಶ್ಲೋಕ ನಮಗೆ ಗೊತ್ತಿರಬಹುದು. ಈ ಸಮಸ್ಯೆಯ ಪರಿಹಾರಕ್ಕಾಗಿ ಈ ಅಂಕಣ. ಶ್ಲೋಕ ನೀವು ಕಳುಹಿಸಿ; ಅರ್ಥ ನಾವು ಹೇಳ್ತೇವೆ.
***********
‘ಸನಾತನಭಾರತ’ ಅಂಕಣ ಮುಂದುವರಿಯುತ್ತಿದೆ. ಹಿಂದಿನ ವಿಶೇಷ ಸಂಚಿಕೆಗೆ ಸಂಗ್ರಹಿಸಿದ ವಿಷಯಗಳಿವು. ಆ ಸಂಚಿಕೆಯನ್ನು ರೂಪಿಸಿಯೂ ಉಳಿದ ಲೇಖನಗಳ ಸಂಖ್ಯೆ ದೊಡ್ಡದು. ಸನಾತನಭಾರತ ಎಲ್ಲಕ್ಕಿಂತ ದೊಡ್ಡದು.

ಧರ್ಮಭಾರತೀ ಆಗಸ್ಟ್ ಪತ್ರಿಕೆಯನ್ನು ಅಂತರಜಾಲದಲ್ಲಿ ಓದಬಹುದು. ವಿಳಾಸ: http://www.dharmabharathi.org/epaper.html


ಮತ್ತೆಲ್ಲ ಎಂದಿನಂತೆ.......


ಒಲವಿನ ಒಸಗೆಯಲ್ಲಿ

-ವಿದ್ವಾನ್ ಜಗದೀಶ ಶರ್ಮಾ
ಸಂಪಾದಕ