Saturday, September 20, 2008

ಗೋಕರ್ಣದ ಬಗ್ಗೆ ವಿಜಯಕರ್ನಾಟಕದಲ್ಲಿ ಪ್ರಕಟಗೊಂಡ ಶ್ರೀ ಪ್ರತಾಪಸಿಂಹರವರ ಲೇಖನ

ಹೇ ಆದಿಶಂಕರ, ‘ಏಜೆಂಟ’ರಿಗೆ ಸೇರಬೇಕೇ ಅಧಿಕಾರ?

ಅತ್ರತಿಷ್ಠ ಯತಿಶ್ರೇಷ್ಠ ಗೋಕರ್ಣೇ ಮುನಿಸೇವಿತೇ
ಮಹಾಬಲಸ್ಯ ಲಿಂಗಂ ಚ ನಿತ್ಯಂ ವಿಧಿವದರ್ಚನಂ
ಗೋಕರ್ಣ ಮಂಡಲೇ ವ್ಯಕ್ತಂ ತವ ಶಿಷ್ಯ ಪರಂಪರೈಃ
ಆಚಾರ್ಯತ್ವಂಚ ಕುರುತಾಂ ವಿದ್ಯಾನಂದ ಮಹಾಮತೇ


ಅಂದರೆ, ‘ಯತಿಶ್ರೇಷ್ಠನಾದ ವಿದ್ಯಾನಂದನೇ, ಗೋಕರ್ಣ ದಲ್ಲಿ ನಿಲ್ಲು. ನಿತ್ಯವೂ ಮಹಾಬಲನ ಲಿಂಗವನ್ನು ವಿಧಿವತ್ತಾಗಿ ಅರ್ಚಿಸು. ನಿನ್ನ ಶಿಷ್ಯ ಪರಂಪರೆಯಿಂದ ಒಡಗೂಡಿ ಆಚಾರ್ಯತ್ವವನ್ನು ಮಾಡುತ್ತಾ ಮಹಾಮತಿಯಾದ ನೀನು ಇಲ್ಲಿರು’ ಎಂದು ನುಡಿದ ಆದಿ ಶಂಕರಾಚಾರ್ಯರೇ ಗೋಕರ್ಣದಲ್ಲಿ ಮಠವೊಂದನ್ನು ಸ್ಥಾಪಿಸಿದರು.

ವರದ ಮಹರ್ಷಿಯಿಂದ ಪ್ರಾಪ್ತವಾಗಿದ್ದ ಶ್ರೀರಾಮಾದಿ ವಿಗ್ರಹಗಳು, ಚಂದ್ರಮೌಳಿಯ ಲಿಂಗ, ಪಾದುಕೆಯನ್ನು ವಿದ್ಯಾನಂದರಿಗೆ ಒಪ್ಪಿಸಿದ ಶಂಕರಾ ಚಾರ್ಯರು ಈ ಮಠ ‘ರಘೂತ್ತಮ ಮಠ’ವೆಂದು ಪ್ರಸಿದ್ಧಿ ಯಾಗಲಿ ಎಂದು ಹಾರೈಸಿ ಜಗನ್ನಾಥ ಕ್ಷೇತ್ರಕ್ಕೆ ತೆರಳಿದರು. ಹೀಗೆ ಶಂಕರಾಚಾರ್ಯರಿಂದ ನೇರವಾಗಿ ದೀಕ್ಷೆ ಪಡೆದ ವಿದ್ಯಾನಂದರೇ ಈ ಮಠದ ಮೊದಲ ಪೀಠಾಧಿಪತಿಗಳು. ಗೋವಾದ ಮಾಂಡೋವಿ ನದಿಯಿಂದ ಕೇರಳದ ಚಂದ್ರ ಗಿರಿ ನದಿಯವರೆಗೆ ಮಠದ ವ್ಯಾಪ್ತಿ ಹರಡುತ್ತದೆ. ಇದು ಒಂದು ಜಾತಿಗೆ ಸೇರಿದ ಮಠವಲ್ಲ. ಈ ಪ್ರದೇಶಗಳಲ್ಲಿ ಕಂಡುಬರುವ ಹವ್ಯಕ, ದೇವಾಂಗ, ಮಡಿವಾಳ, ಭಂಡಾರಿ, ಹಾಲಕ್ಕಿ, ಅಮ್ಮಕೊಡವ, ಪದ್ಮಶಾಲಿ, ಭೋವಿ, ಹರಿಕಂತರು, ಮರಾಠಿ, ಕೋಕಾಬಿ, ಪಡಿಯಾರು, ಗುಡಿಗಾರ, ಭಜಂತ್ರಿ, ಗಾಣಿಗ, ಗೋಮಾಂತರು, ಕಂಚುಗಾರ, ಕೆಡಿಯ ಹೀಗೆ ೧೮ ಜಾತಿಗಳು ರಘೂತ್ತಮ ಮಠಕ್ಕೆ ಸೇರಿವೆ.

ಇದೇನೇ ಇರಲಿ, ನಮ್ಮ ಕರ್ನಾಟಕದಲ್ಲಿ ಹಿಂದೂ ಧರ್ಮದ ಪುನರುತ್ಥಾನಕ್ಕಾಗಿ ತಲೆಯೆತ್ತಿದ ವಿಜಯ ನಗರ ಸಾಮ್ರಾಜ್ಯ ಹಾಗೂ ಆ ಸಾಮ್ರಾಜ್ಯದ ವ್ಯಾಪ್ತಿಗೆ ಸೇರಿದ್ದ ಮಂಡಲಾಧೀಶರು, ಪ್ರಾಂತಾಧಿಪತಿಗಳು, ಪಾಳೇಗಾರರು ಮಠಕ್ಕೆ ದಾನ, ದತ್ತಿ ನೀಡಲಾರಂಭಿಸಿದರು. ಅವರು ನೀಡಿದ ಹಗಲು ದೀವಟಿಗೆ, ಶ್ವೇತಛತ್ರಗಳು, ಕುದುರೆ, ಆನೆ, ಒಂಟೆಗಳಿಂದ ಶ್ರೀಕ್ಷೇತ್ರ ಗೋಕರ್ಣದಲ್ಲಿ ತಲೆಯೆತ್ತಿದ್ದ ರಘೂತ್ತಮ ಮಠಕ್ಕೂ ವೈಭವ ಬಂತು.

ಈ ರಘೂತ್ತಮ ಮಠಕ್ಕೂ ರಾಮಚಂದ್ರಾಪುರ ಮಠಕ್ಕೂ ಒಂದು ಕೊಂಡಿಯಿದೆ.

ರಘೂತ್ತಮ ಮಠದ ೧೨ನೇ ಯತಿಗಳಾದ ಶ್ರೀ ರಾಮ ಚಂದ್ರ ಭಾರತೀ ಸ್ವಾಮಿಗಳು ಕಾರಣಾಂತರದಿಂದ ಹೊಸನಗರ ತಾಲೂಕಿನಲ್ಲಿರುವ ಶ್ರೀರಾಮಚಂದ್ರಾಪುರ ಗ್ರಾಮದ ಶರಾವತಿ ನದಿ ತೀರಕ್ಕೆ ವಲಸೆ ಬಂದರು. ಅಲ್ಲೇ ಒಂದು ಕುಟೀರವನ್ನು ನಿರ್ಮಿಸಿಕೊಂಡು ವಾಸಮಾಡಲಾರಂಭಿಸಿದರು. ಹಾಗೆ ಯತಿಗಳೇ ಆಗಮಿಸಿದ ಕಾರಣ ಶ್ರೀರಾಮಚಂದ್ರಾಪುರವೇ ಮಠದ ಮುಖ್ಯಕೇಂದ್ರವಾಯಿತು. ರಘೂತ್ತಮ ಮಠ ಹೋಗಿ ಶ್ರೀರಾಮಚಂದ್ರಾಪುರ ಮಠವಾಯಿತು. ಇತ್ತ ೧೨ನೇ ಯತಿಗಳು ಇರುವವರೆಗೂ ಆದಿ ಶಂಕರಾಚಾರ್ಯರ ಅಣತಿಯಂತೆ ಗೋಕರ್ಣದಲ್ಲಿರುವ ವಿಶ್ವವಿಖ್ಯಾತ ಶ್ರೀಸಂಸ್ಥಾನ ಮಹಾಬಲೇಶ್ವರ ದೇವರ ಹಾಗೂ ಪರಿವಾರ ದೇವರ ಪೂಜಾದಿ ಸೇವೆಗಳನ್ನು ಮಠದ ಪೀಠಾಧಿಪತಿಗಳೇ ನೆರವೇರಿಸುತ್ತಾ ಬರುತ್ತಿದ್ದರು. ಅವರಿಗೆ ಪೂಜಾಕಾರ್ಯಗಳ ಸಂದರ್ಭದಲ್ಲಿ ಸಹಾಯ ಮಾಡಲು ಉಪಾಧಿವಂತರು ಎಂಬವವರಿದ್ದರು. ಆದರೆ ೧೨ನೇ ಯತಿಗಳು ರಾಮಚಂದ್ರಾಪುರಕ್ಕೆ ಬಂದು ನೆಲೆಸಿದ ಕಾರಣ, ರಾಮಚಂದ್ರಾಪುರವೇ ಮುಖ್ಯವಾದ ಕೇಂದ್ರವಾದ ಸಲುವಾಗಿ ಗೋಕರ್ಣದ ಮಹಾಬಲೇಶ್ವರ ಹಾಗೂ ಪರಿವಾರ ದೇವರ ಪೂಜಾ ಸೇವೆಯನ್ನು ಯತಿಗಳೇ ನೆರವೇರಿ ಸಲು ಸಾಧ್ಯವಾಗದಂತಾಯಿತು. ಇಂತಹ ಪರಿಸ್ಥಿತಿಯಲ್ಲಿ ಯತಿಗಳಿಗೆ ಪೂಜಾ ಸಂದರ್ಭದಲ್ಲಿ ಸಹಾಯ ಮಾಡುತ್ತಿದ್ದ ಉಪಾಧಿವಂತರೇ ಅರ್ಚನೆ ಮಾಡಬೇಕಾಗಿ ಬಂತು. ಆದರೆ ಮಠ ಸ್ಥಳಾಂತರಗೊಂಡರೂ ಉಪಾಧಿವಂತರು ಪೀಠಾಧಿಪತಿಗಳ ಹತೋಟಿಯಲ್ಲೇ ಇದ್ದರು, ಅಣತಿಗೆ ಅನುಗುಣವಾಗಿ ನಡೆದುಕೊಳ್ಳುತ್ತಿದ್ದರು. ಇತ್ತೀಚಿನವರೆಗೂ, ಅಂದರೆ ೧೯೮೩ರಲ್ಲಿ ಶ್ರೀಕ್ಷೇತ್ರ ಗೋಕರ್ಣದಲ್ಲಿ ಶ್ರೀಸಂಸ್ಥಾನ ಮಹಾಬಲೇಶ್ವರ ದೇವರಿಗೆ ಅಷ್ಟಬಂಧ ಕಾರ್ಯಕ್ರಮ ನಡೆದಾಗಲೂ ಮಠದ ೩೫ನೇ ಪೀಠಾಧಿಪತಿಗಳಾಗಿದ್ದ ರಾಘವೇಂದ್ರ ಭಾರತೀ ಅವರೇ ಮುಂದೆ ನಿಂತು ನವರತ್ನಾದಿಗಳನ್ನು ದೇವರಿಗೆ ಅರ್ಪಿಸಿ ವಿಧಿವಿಧಾನಗಳನ್ನು ನೆರವೇರಿಸಿಕೊಟ್ಟಿದ್ದರು. ಇಂದಿಗೂ ಪೀಠಾಧಿಪತಿಗಳ ಪರಾಕು ಹೇಳುವಾಗ “ಶ್ರೀಸಂಸ್ಥಾನ ಗೋಕರ್ಣ ಮಂಡಲಾಧೀಶ್ವರ ಶ್ರೀಮದ್ ಜಗದ್ಗುರು ಶಂಕರಾಚಾರ್ಯ” ಎನ್ನಲಾಗುತ್ತದೆ.

ಆದರೆ ಆದಿಶಂಕರರು ಹಾದುಹೋದ ಗೋಕರ್ಣಕ್ಕೆ ಇಂದು ನೀವೇನಾದರೂ ಭೇಟಿ ಕೊಟ್ಟರೆ ದೇವರು ಇರುವಿಕೆಯ ಬಗ್ಗೆಯೇ ನಿಮ್ಮ ಮನದಲ್ಲಿ ಖಂಡಿತ ಅನು ಮಾನಗಳೇಳುತ್ತವೆ!! ಬೆಂಗಳೂರಿನ ಮೆಜೆಸ್ಟಿಕ್ ಬಸ್‌ಸ್ಟಾಂಡ್ ಅಥವಾ ಗಾಂಧೀನಗರದಲ್ಲಿ ಬಸ್‌ನಿಂದ ಕೆಳಗಿಳಿದ ಕೂಡಲೇ “ನಿಮ್ಮ ಕೈಯಲ್ಲಿನ ಬ್ಯಾಗನ್ನು ಮೊದಲು ಕಿತ್ತುಕೊಂಡು, ಬನ್ನಿ ಸಾರ್ ಕುಳಿತುಕೊಳ್ಳಿ, ಎಲ್ಲಿಗೆ ಹೋಗಬೇಕು ಸಾರ್” ಎನ್ನುತ್ತಾ ಮುತ್ತಿಗೆ ಹಾಕುವ ಆಟೋ ಡ್ರೈವರ್‌ಗಳಂತೆ ಗೋಕರ್ಣದಲ್ಲಿ ಅರ್ಚಕರು ನಿಮ್ಮ ಮೇಲೆ ಮುಗಿಬೀಳುತ್ತಾರೆ!! ಸಾಮಾನ್ಯ ಜನರೂ ದೇವರನ್ನು ಮಟ್ಟಬಹುದಾದ ಎರಡೇ ಎರಡು ಕ್ಷೇತ್ರಗಳೆಂದರೆ ಕಾಶಿ ಮತ್ತು ಗೋಕರ್ಣ. ಆದರೆ ಗೋಕರ್ಣದ ಅರ್ಚಕರು, ‘ದೇವರನ್ನು ಮುಟ್ಟಬೇಕಾ?’ ಅಂತ ಕೇಳಿದಾಗ ನೀವೇನಾದರೂ ‘ಹೌದು’ ಎಂದರೆ ಕೂಡಲೇ ‘ರೇಟ್’ ಹೇಳಿ ಬಿಡುತ್ತಾರೆ! ಮೊದಲು ಉಪಾಧಿವಂತರ ಸುಮಾರು ಐದು ಕುಟುಂಬಗಳು ಇಲ್ಲಿ ಅರ್ಚನೆ ಕಾರ್ಯದಲ್ಲಿ ತೊಡಗಿದ್ದವು. ಆದರೆ ಕಾಲಾಂತರದಲ್ಲಿ ಕುಟುಂಬಗಳ ಗಾತ್ರ ದೊಡ್ಡದಾಗಿ, ಒಡೆದು ಹೋಳಾಗಿ, ಪ್ರತ್ಯೇಕವಾಗಿ ಇಂದು ೩೦ಕ್ಕೂ ಹೆಚ್ಚು ಕುಟುಂಬಗಳಿವೆ. ಹಾಗಾಗಿ ಪೂಜಾ ಕಾರ್ಯ ನೆರವೇರಿಸುವುದಕ್ಕೂ ಪೈಪೋಟಿ ಸೃಷ್ಟಿಯಾಗಿದೆ, ಕಿತ್ತಾಟವೂ ನಡೆದಿದೆ. ಹಾಗಾಗಿ ಒಳ ಒಪ್ಪಂದ ಏರ್ಪಟ್ಟು ತಿಂಗಳಲ್ಲಿ ಇಂತಿಷ್ಟು ದಿನ ಒಂದು ಕುಟುಂಬಕ್ಕೆ ಎಂದು ವಿಭಜನೆ ಮಾಡಿಕೊಳ್ಳಲಾಗಿದೆ. ಇಲ್ಲೂ ಒಂದು ರಾಜಕೀಯವಿದೆ. ಒಂದು ಕುಟುಂಬದ ಸರದಿ ಬಂದಾಗ ಉಳಿದ ಕುಟುಂಬಗಳ ಅರ್ಚಕರು ಖಾಲಿ ಕುಳಿತುಕೊಳ್ಳುವುದಿಲ್ಲ. ಪೂಜೆ, ಪುನಸ್ಕಾರವನ್ನು ಮಾತ್ರ ದೇವಸ್ಥಾನದಲ್ಲಿ ಮಾಡಿಸಿ, ಹೋಮ, ಹವನಗಳನ್ನು ನಾವು ಮನೆಯಲ್ಲೇ ಬೇಗ ಮಾಡಿಕೊಡುತ್ತೇವೆ ಎಂದು ಭಕ್ತಾದಿಗಳನ್ನೇ ಪುಸಲಾಯಿಸುತ್ತಾರೆ!ಇಂತಹ ಅರ್ಚಕರು(ದೇವರ ಏಜೆಂಟರು) ಇರುವ ಕ್ಷೇತ್ರ ಗಳ ಸ್ವಾಸ್ಥ್ಯ ಹೇಗೆ ತಾನೇ ಹಾಳಾಗದೆ ಉಳಿಯಲು ಸಾಧ್ಯ?

ಇಲ್ಲಿನ “ಓಂ ಬೀಚ್”ಗೆ ಹಿಪ್ಪಿಗಳು ಬಂದಿದ್ದಾರೆ, ಬಾರ್ ಗಳಾಗಿವೆ, ಲಾಡ್ಜ್‌ಗಳಿವೆ, ‘ಚಿನ್ನವೀಡು’ ಸೌಲಭ್ಯವೂ ಇದೆ. ಮತ್ತೂ ಒಂದು ವಿಶೇಷವೆಂದರೆ ಆ ಬಾರ್, ಲಾಡ್ಜ್, ಲಿಕ್ಕರ್ ಶಾಪ್‌ಗಳ ಮಾಲೀಕರಲ್ಲಿ ದೇವರ ಏಜೆಂಟರೂ ಇದ್ದಾರೆ. ವಿದೇಶಿ ಮದ್ಯವೂ ದೊರೆಯುತ್ತದೆ, ಮಾನಿನಿಯರೂ ಸಿಗುತ್ತಾರೆ. ದಕ್ಷಿಣದ ಕಾಶಿ ಎಂದೇ ಹೆಸರಾಗಿದ್ದ ಗೋಕರ್ಣ ವಿಂದು ಹೇಸಿಗೆಪಟ್ಟುಕೊಳ್ಳಬೇಕಾದ ಮಟ್ಟಕ್ಕೆ ಹೋಗಿದೆ. ಅಲ್ಲಿಗೆ ಹೋದರೆ ದೇವರ ಮೇಲೆ ಇದ್ದ ಶ್ರದ್ಧೆಯೂ ಹೊರಟು ಹೋಗುತ್ತದೆ, ಅರ್ಚಕರ ಬಗ್ಗೆ ಅಸಹ್ಯವುಂಟಾಗುತ್ತದೆ. ಇಷ್ಟಾಗಿಯೂ ಗೋಕರ್ಣದ ಕೊಳೆ ತೊಳೆಯಲು ಸಾಧ್ಯವಾಗುತ್ತಿರಲಿಲ್ಲ.

ಅದಕ್ಕೆ ಕಾರಣವೂ ಇದೆ.
೧೯೫೦ರ ‘ಬಾಂಬೆ ದತ್ತಿ ಕಾಯಿದೆ’ ಒಂದು ದೊಡ್ಡ ಅಡಚಣೆಯಾಗಿತ್ತು. ಈ ಕಾಯಿದೆ ಜಾರಿಗೆ ಬಂದಾಗ ಮಠದ ನಿಯಂತ್ರಣದಲ್ಲಿದ್ದ ಗೋಕರ್ಣದ ಶ್ರೀಮಹಾ ಬಲೇಶ್ವರ ಹಾಗೂ ಅಲ್ಲಿನ ಪರಿವಾರ ದೇವರ ಗುಡಿಗಳನ್ನೂ ಕಾಯಿದೆಯ ವ್ಯಾಪ್ತಿಗೆ ತಪ್ಪಾಗಿ ಒಳಪಡಿಸಿ ಅಧಿಸೂಚನೆ ಹೊರಡಿಸಲಾಯಿತು. ಇತ್ತ ೧೨ನೇ ಯತಿಗಳ ಕಾಲದಲ್ಲೇ, ಅಂದರೆ ೧೬ನೇ ಶತಮಾನದಲ್ಲೇ ಗೋಕರ್ಣದಿಂದ ರಾಮ ಚಂದ್ರಾಪುರಕ್ಕೆ ಸ್ಥಳಾಂತರಗೊಂಡಿದ್ದ ಶ್ರೀರಾಮಚಂದ್ರಾಪುರ ಮಠ ದೇವಾಲಯದ ಮೇಲೆ ನಿಯಂತ್ರಣ ಹೊಂದಿದ್ದರೂ ೧೯೫೦ರ ಕಾಯಿದೆಯಿಂದಾದ ತಪ್ಪನ್ನು ಸರಿಪಡಿಸಲು ಅಷ್ಟಾಗಿ ಪ್ರಯತ್ನಿಸಲಿಲ್ಲ. ಹಾಗಾಗಿ ದೇವಾಲಯ ಮಠಕ್ಕೆ ಬದಲು ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಒಳಪಟ್ಟಿತು. ಅರ್ಚನೆ ಮಾಡಿಕೊಂಡು ಬರುತ್ತಿದ್ದ ಉಪಾಧಿವಂತರನ್ನೇ ದೇವಾಲಯದ ಟ್ರಸ್ಟಿಗಳಾಗಿ ನೇಮಕ ಮಾಡಲಾಯಿತು. ಇವರ ನೇಮಕಕ್ಕೆ ಮಠದ ಅಸ್ತು ಕೂಡ ದೊರಕಿತ್ತು. ಆದರೆ ಮಠದ ನಿರ್ಲಕ್ಷ್ಯ ಹಾಗೂ ಕಾಯಿದೆಯಿಂದಾಗಿ ತಪ್ಪಿದ ನಿಯಂತ್ರಣದಿಂದಾಗಿ ಮಠಕ್ಕೆ ಅಧೀನವಾಗಿ ನಡೆದುಕೊಳ್ಳುವ ವಿಧಿವಿಧಾನಗಳು ಹೆಸರಿಗಷ್ಟೇ ಮುಂದುವರಿದುಕೊಂಡು ಹೋಗಿ ಕಾಲಾಂತರದಲ್ಲಿ ಉಪಾಧಿವಂತರೇ ಗೋಕರ್ಣದ ಬಾಸ್‌ಗಳಾದರು. ೧೯೫೭ರಲ್ಲಿ ದೇವಾಲಯದ ಟ್ರಸ್ಟಿ ದಾಮೋದರ ದತ್ತಾತ್ರೇಯ ದೀಕ್ಷಿತರು ತೀರಿಕೊಂಡ ನಂತರ ಮತ್ತೆ ಅರ್ಚನೆಯ ಪ್ರಶ್ನೆ ಎದುರಾಯಿತು. ತಮ್ಮ ತಂದೆಯ ಮರಣದಿಂದಾಗಿ ತೆರವಾಗಿರುವ ಸ್ಥಾನವನ್ನು ತನಗೇ ನೀಡಬೇಕೆಂದು ದಾಮೋದರ ದತ್ತಾತ್ರೇಯ ಅವರ ಪುತ್ರ ವಿಘ್ನೇಶ್ವರ ದಾಮೋದರ ದೀಕ್ಷಿತ್ ೧೯೫೦ರ ಬಾಂಬೆ ದತ್ತಿ ಕಾಯಿದೆಯ ಸೆಕ್ಷನ್ ೪೭ರ ಅಡಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದರು. ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ ವಿಘ್ನೇಶ್ವರ ದೀಕ್ಷಿತರನ್ನು ಟ್ರಸ್ಟಿಯಾಗಿ ನೇಮಕ ಮಾಡಿತು. ದೇವಾಲಯದ ಏಕಮಾತ್ರ ಜೀವಂತ ಟ್ರಸ್ಟಿಯಾಗಿದ್ದ ಅವರು ೨೦೦೪ರಲ್ಲಿ ವಿಧಿವಶರಾದಾಗ ಅವರ ಪುತ್ರ ಬಾಲಚಂದ್ರ ದೀಕ್ಷಿತ್ ದೇವಾಲಯ ತಮ್ಮ ಪಿತ್ರಾರ್ಜಿತ ಆಸ್ತಿಯೆಂಬಂತೆ ಹಕ್ಕುಪ್ರತಿಪಾದಿಸಿದರು. ಇವರ ಮಾತಿಗೆ ಕೋರ್ಟಿನಲ್ಲಿ ಕಿಮ್ಮತ್ತು ಸಿಗಲಿಲ್ಲ. ಅಷ್ಟಕ್ಕೂ “೧೯೯೭ರ ಕರ್ನಾಟಕ ಧಾರ್ಮಿಕ ಮತ್ತು ದತ್ತಿ ಸಂಸ್ಥೆಗಳ ಕಾಯಿದೆ” ಜಾರಿಗೆ ಬಂದ ನಂತರ ೧೯೫೦ರ ಬಾಂಬೆ ದತ್ತಿ ಕಾಯಿದೆ ಅರ್ಥ ಕಳೆದುಕೊಂಡು, ಕರ್ನಾಟಕಕ್ಕೆ ಅನ್ವಯವಾಗುತ್ತಿಲ್ಲ. ೧೯೯೭ರ ಕಾಯಿದೆಯ ಸೆಕ್ಷನ್ ೧(೪)ಮಠಗಳು ಹಾಗೂ ಮಠಗಳಿಗೆ ಸೇರಿದ ದೇವಸ್ಥಾನಗಳನ್ನು ಮುಜರಾಯಿ ಇಲಾಖೆಯ ವ್ಯಾಪ್ತಿಯಿಂದ ಹೊರಗಿಟ್ಟಿದೆ. ಈ ಬಗ್ಗೆ ಎಚ್ಚೆತ್ತುಕೊಂಡ ಗೋಕರ್ಣದ ಸ್ಥಳೀಯರು ಹಾಗೂ ಶ್ರೀರಾಮಚಂದ್ರಾಪುರ ಮಠದ ೩೬ನೇ ಯತಿಗಳಾದ ರಾಘವೇಶ್ವರ ಭಾರತೀ ಸ್ವಾಮೀಜಿಗಳು ೫೮ ವರ್ಷಗಳ ಹಿಂದೆ ಆದ ತಪ್ಪನ್ನು ಸರಿಪಡಿಸಿ, ದೇವಾಲಯವನ್ನು ಅಧಿಸೂಚನೆಯ ವ್ಯಾಪ್ತಿಯಿಂದ ಹೊರಗಿಟ್ಟು ಮಠಕ್ಕೆ ಒಪ್ಪಿಸಬೇಕೆಂದು ಕರ್ನಾಟಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿದ್ದರು. ಮುಖ್ಯಮಂತ್ರಿ ಯಡಿಯೂರಪ್ಪನವರ ಸರಕಾರ ಆಗಸ್ಟ್ ೧೨ರಂದು ದೇವಾಲಯದ ಆಡಳಿತ ವನ್ನು ಶ್ರೀರಾಮಚಂದ್ರಾಪುರ ಮಠದ ಸುಪರ್ದಿಗೆ ನ್ಯಾಯ ಸಮ್ಮತವಾಗಿ ಒಪ್ಪಿಸಿದೆ. ಸರಕಾರದ ಈ ನಿರ್ಧಾರದಿಂದಾಗಿ ಒಂದು ರೀತಿಯಲ್ಲಿ “Floodgates” ತೆರೆದಂತಾಗಿದೆ. ಇತರ ಮಠಗಳೂ ಕೂಡ ಸರಕಾರದ ಈ ಆದೇಶವನ್ನು ಆಧಾರವಾಗಿಟ್ಟುಕೊಂಡು ಪರಂಪರಾಗತವಾಗಿ ತಮಗೆ ಸೇರಬೇಕಾಗಿರುವ, ಆದರೆ ಈಗ ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಟ್ಟಿರುವ ದೇವಾಲಯಗಳನ್ನು ಮರಳಿ ತಮಗೆ ನೀಡುವಂತೆ ಹಕ್ಕು ಪ್ರತಿಪಾದನೆ ಮಾಡಬಹುದು. ಮಠಗಳು ದೇವಾಲಯಗಳ ಆಡಳಿತವನ್ನು ಕೈಗೆತ್ತಿಕೊಂಡರೆ ತೀರ್ಥಕ್ಷೇತ್ರಗಳ ಅಭಿವೃದ್ಧಿಯೂ ಆಗುತ್ತದೆ. ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು “ಧರ್ಮೋ ತ್ಥಾನ ಟ್ರಸ್ಟ್” ಸ್ಥಾಪಿಸಿ ಶಿಥಿಲಗೊಂಡಿರುವ ದೇವಾಲಯಗಳ ಜೀರ್ಣೋದ್ಧಾರದಂತಹ ಮಹತ್ಕಾರ್ಯ ಮಾಡುತ್ತಿದ್ದಾರೆ. ಆದಿ ಚುಂಚನಗಿರಿ ಸ್ವಾಮೀಜಿಯವರು ನಿರ್ಮಿಸಿರುವ ಕಾಲಭೈರವೇಶ್ವರ ದೇವಾಲಯವಂತೂ ಎಲ್ಲರ ಹುಬ್ಬೇರಿಸು ವಂತಿದೆ. ನಮ್ಮ ದೇವಾಲಯಗಳ ಮೇಲಿನ ನಿಯಂತ್ರಣ ಮಠಗಳಿಗೆ ದೊರೆತರೆ ಮುಜರಾಯಿ ಇಲಾಖೆ ಸೇರಿ ಮಸೀದಿ, ಚರ್ಚ್ ಅಭಿವೃದ್ಧಿಯ ಪಾಲಾಗುತ್ತಿದ್ದ ಹುಂಡಿ ಹಣ ದೇವಾಲಯಗಳ ಅಭಿವೃದ್ಧಿಯಂತಹ ಕಾರ್ಯಕ್ಕೆ ಸದ್ವಿನಿಯೋಗವೂ ಆಗುತ್ತದೆ. ಈ ಹಿನ್ನೆಲೆಯಲ್ಲಿ ಗೋಕರ್ಣ ದೇವಾಲಯವನ್ನು ಶ್ರೀರಾಮಚಂದ್ರಾಪುರ ಮಠಕ್ಕೆ ಹಸ್ತಾಂ ತರ ಮಾಡಿರುವುದನ್ನು ಧರ್ಮದ ಬಗ್ಗೆ ಕಾಳಜಿ ಇರುವ ನಾಡಿನ ಎಲ್ಲ ಗಣ್ಯರೂ ಸ್ವಾಗತಿಸಬೇಕು.

ಆದರೆ ಗೋಕರ್ಣದ ಅರ್ಚಕರು ಸುಮ್ಮನಿರುತ್ತಾರೆಯೇ?!

ಮಹಾಬಲೇಶ್ವರ ದೇವಾಲಯ ತಮ್ಮ ಆಸ್ತಿ ಎಂಬಂತೆ ಬೊಬ್ಬೆ ಹಾಕಲಾರಂಭಿಸಿದ್ದಾರೆ. ವಿಷಯದ ಸತ್ಯಾಸತ್ಯತೆಯನ್ನು ಸರಿಯಾಗಿ ಅರಿಯದ ಹಾಗೂ ಅರಿತರೂ ಕಲಹ ತಂದಿಡುವ ಉದ್ದೇಶದಿಂದ ಕೆಲವರು ಬೊಬ್ಬೆ ಹಾಕುತ್ತಿರುವವರಿಗೆ ಕುಮ್ಮಕ್ಕು ನೀಡುತ್ತಿದ್ದಾರೆ. ಆದರೆ ಉಡುಪಿಯ ಶ್ರೀಕೃಷ್ಣ ಪೇಜಾವರ ಮಠಕ್ಕೆ ಹೇಗೋ, “ಲಕ್ಷ್ಮಿ”ಯಾಗಿರುವ ಶಾರದೆ ಶೃಂಗೇರಿ ಮಠಕ್ಕೆ ಹೇಗೋ ಹಾಗೆಯೇ ಗೋಕರ್ಣದ ದೇವಾಲಯದ ಮೇಲೆ ಶ್ರೀರಾಮಚಂದ್ರಾಪುರಕ್ಕೂ ಹಕ್ಕಿದೆ. ಹಾಗಂತ ದುಡ್ಡು ಮಾಡುವ ಉದ್ದೇಶದಿಂದ ರಾಘವೇಶ್ವರ ಭಾರತೀ ಅವರು ಯಾರಿಗೋ ಸೇರಿದ್ದ ದೇವಾಲಯವನ್ನು ನಮಗೆ ನೀಡಿ ಎಂದು ಕೇಳಿಕೊಂಡಿರಲಿಲ್ಲ. ಮಠಕ್ಕೆ ಸೇರಿ ರುವ ದೇವಾಲಯಕ್ಕೆ ಅಂಟಿಕೊಂಡಿರುವ ಕೊಳೆಯನ್ನು ತೊಳೆ ಯುವ ಉದ್ದೇಶದಿಂದ ಹಕ್ಕು ಪ್ರತಿಪಾದನೆ ಮಾಡಿದ್ದಾರೆ.

ಇದರಲ್ಲಿ ತಪ್ಪೇನಿದೆ?
ನೀವೇ ಹೇಳಿ, ಈಗಿರುವ ಪರಿಸ್ಥಿತಿಯಲ್ಲಿ ಗೋಕರ್ಣ ವೆಂದರೆ ನಿಮಗೆ ಭಕ್ತಿ ಮೂಡುತ್ತದೋ ಆಥವಾ ಓಂ ಬೀಚ್‌ನ ಬಿಕಿನಿಗಳು ನೆನಪಾಗುತ್ತವೋ? ಒಂದು ದೇವಸ್ಥಾನ ಶಿಥಿಲಗೊಂಡರೆ ಅದರ ಜೀರ್ಣೋದ್ಧಾರ ಕಾರ್ಯವನ್ನು ಮಾಡಬೇಕಾಗುತ್ತದೆ. ಇಂದು ಇಡೀ ಗೋಕರ್ಣದ ಮಹಾ ಬಲೇಶ್ವರ ದೇವಾಲಯ, ಅದರ ಸುತ್ತಲಿನ ಪರಿಸರ ಮಾತ್ರವಲ್ಲ, ಅರ್ಚನೆಯಲ್ಲಿ ತೊಡಗಿರುವವರ ಮನಸ್ಸುಗಳ ಜೀರ್ಣೋದ್ಧಾರ ಕಾರ್ಯವೂ ಆಗಬೇಕಾಗಿದೆ. ಅಷ್ಟಕ್ಕೂ ನಾವು ನಮ್ಮ ವಿಶ್ವಾಸದ ಗಂಟನ್ನು ಇಟ್ಟಿರುವುದೇ ಮಠ, ಮಂದಿರಗಳಲ್ಲಿ. ಅಂತಹ ಸ್ಥಳಗಳೇ ರೇಜಿಗೆ ಹುಟ್ಟಿಸುವ ತಾಣಗಳಾದರೆ ಜನರಿಗೆ ದೇವರ ಮೇಲಿನ ವಿಶ್ವಾಸವೇ ಹೊರಟು ಹೋಗದೇ ಇದ್ದೀತೆ? ಮಂಗಳಾರತಿ ತಟ್ಟೆಯ ಮೇಲೆ ಹಾಕಿದ್ದು ನೋಟೋ, ನಾಣ್ಯವೋ ಎಂಬುದನ್ನು ನೋಡಿ ಪ್ರಸಾದ ನೀಡುವ ಅರ್ಚಕರಿಂದಾಗಿ ಕೆಲವು ದೇವಾಲಯಗಳ ಬಗ್ಗೆ ನಮಗೆ ಕಸಿವಿಸಿಯಾಗಲಾರಂಭಿಸಿದೆ. ಈ ಹಿನ್ನೆಲೆಯಲ್ಲಿ ರಾಘವೇಶ್ವರ ಭಾರತೀ ಅವರು ಗೋಕರ್ಣದ ಕಡಲ ಕಿನಾರೆಯ ಕೊಳೆ ತೊಳೆದು ಶುದ್ಧೀಕರಣ ಮಾಡಲು ಹೊರಟಿದ್ದಾರೆ. ಆದರೂ ವಿರೋಧ ವ್ಯಕ್ತಪಡಿಸುತ್ತಿರುವುದೇಕೆ? ಒಂದು ವೇಳೆ ರಾಘವೇಶ್ವರರಿಗೆ ದುಡ್ಡು ಮಾಡುವ ಹಂಬಲವಿದ್ದಿದ್ದರೆ ರಾಮಚಂದ್ರಾಪುರದ ಹಟ್ಟಿಯಲ್ಲಿ ದನಕರುಗಳ ಬದಲು ಒಂದೆರಡು ಇಂಜಿನಿಯ ರಿಂಗ್, ಮೆಡಿಕಲ್ ಕಾಲೇಜುಗಳೆಂಬ ‘ಕಾಮ ಧೇನು’ಗಳನ್ನು ಕಟ್ಟುತ್ತಿದ್ದರು. ಅವರ ಸಾಮಾಜಿಕ ಕಾಳಜಿ ಈಗಾಗಲೇ ಸಾಬೀತಾಗಿದೆ. ಇಲ್ಲದಿದ್ದರೆ ಗೋಮಾತೆಯ ಮಹತ್ವವನ್ನು ಸಾರುವ ಪ್ರತಿಫಲವಿಲ್ಲದ ಕೆಲಸಕ್ಕೆ ಅವರು ಕೈಹಾಕುತ್ತಿರಲಿಲ್ಲ. ಇವತ್ತು ನಾಸ್ತಿಕವಾದಿ ಕಮ್ಯುನಿಸ್ಟರ ಕೇರಳದಲ್ಲಿ ಅಕ್ಕರೆಯ ಅಪ್ಪುಗೆಯ ಮೂಲಕ ದೇವರ ಮೇಲಿನ ವಿಶ್ವಾಸವನ್ನು ಗಟ್ಟಿಗೊಳಿಸುತ್ತಿರುವ ‘ಅಮ್ಮಾ’, ಆಧ್ಯಾತ್ಮದ ಮೂಲಕ ಜನರಿಗೆ ಮನಃಶಾಂತಿ ನೀಡುತ್ತಿರುವ ಶ್ರೀ ಶ್ರೀ ರವಿಶಂಕರ್ ಗುರೂಜಿ, ಯೋಗದ ಮೂಲಕ ಆರೋಗ್ಯಯುತ ಜೀವನ ಮತ್ತು ಆಧ್ಯಾತ್ಮದತ್ತ ನಮ್ಮನ್ನು ಕರೆದೊಯ್ಯುತ್ತಿರುವ ಬಾಬಾ ರಾಮದೇವ್, ಆಮಿಷಗಳಿಗೊಳಗಾಗಿ ಮತಾಂತರಗೊಂಡಿರುವವರನ್ನು “ಶಬರಿ ಕುಂಭ’ದಲ್ಲಿ ಮೀಯಿಸಿ ಮರಳಿ ಮಾತೃಧರ್ಮಕ್ಕೆ ಕರೆತರುತ್ತಿರುವ ಆಶಾರಾಮ್ ಬಾಪು ಮುಂತಾದವರು ಅಪ್ರತಿಮ ಸೇವೆ ಮಾಡುತ್ತಿದ್ದಾರೆ. ನಾವು ತಾಯಿಯ ನಂತರ ಸ್ಥಾನವನ್ನು ನೀಡಿರುವ ಗೋಮಾತೆಯ ಬಗ್ಗೆ ಅರಿವು ಮೂಡಿಸುತ್ತಿರುವ ರಾಘವೇಶ್ವರ ಭಾರತೀ ಸ್ವಾಮಿಗಳು ಮಾಡುತ್ತಿರುವುದೂ ಆ ರೀತಿಯ ಸೇವೆ ಮತ್ತು ಧರ್ಮಸಂಸ್ಥಾಪನಾ ಕಾರ್ಯವನ್ನೇ. ಅಂತಹವರ ಸುಪರ್ದಿಗೆ ಗೋಕರ್ಣದ ದೇವಾಲಯವನ್ನು ನೀಡಿದರೂ ವಿರೋಧಿಸುತ್ತಾರಲ್ಲಾ…

ಹೇ ಆದಿಶಂಕರಾ!

No comments: